ಸದ್ಯ ಮೊಬೈಲ್ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈಗ ದೇಶದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗೂ ಮೊಬೈಲ್ ಬಂದಿದೆ, ಅದೇ ರೀತಿ ಒಂದು ಹಳ್ಳಿಗೆ ಮೊದಲಬಾರಿಗೆ ಮೊಬೈಲ್ ನೆಟ್ ವರ್ಕ್ ಬಂದಮೇಲೆ ಚೇತನ ಎಂಬ ಬಾಲಕನ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿತು, ಅದರಿಂದ ಮುಂದೆ ಏನೇನೆಲ್ಲ ಆಯಿತು ಎಂದು ಓ ನನ್ನ ಚೇತನಾ ಚಿತ್ರದ ಮೂಲಕ ಮಹಿಳಾ ನಿರ್ದೇಶಕಿ ಅಪೂರ್ವ ನಿರೂಪಿಸಿದ್ದಾರೆ. ನಟಿಯಾಗಿದ್ದ ಅಪೂರ್ವ ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದಾರೆ. ಮಕ್ಕಳ ಜೊತೆಗೆ ಪೋಷಕರೂ ಸಹ ನೋಡಲೇಬೇಕಾದಂಥ ಚಿತ್ರವಿದು. ಓ ನನ್ನ ಚೇತನ ಚಿತ್ರದಲ್ಲಿ ಮಕ್ಕಳ ಕನಸುಗಳನ್ನು ತೆರೆದಿಡಲಾಗಿದೆ, ಓದೋ ಟೈಮಲ್ಲಿ ಓದಬೇಕು, ಮೊಬೈಲ್, ಫೇಸ್ ಬುಕ್ ಅಂತ ಮುಳುಗಿದರೆ ಅವರ ಏಕಾಗ್ರತೆ ಹಾಳಾಗಿ ಓದಿನ ಕಡೆ ಗಮನ ಹರಿಸಲು ಸಾಧ್ಯವಾಗಲ್ಲ. ಅಲ್ಲದೆ ಆರೋಗ್ಯದ ವಿಷಯದಲ್ಲೂ ಮಕ್ಕಳಿಗೆ ಮೊಬೈಲ್ ಹಾನಿಕಾರಕ ಎಂದು ಈ ಚಿತ್ರ ಹೇಳುತ್ತದೆ, ನಿರ್ದೇಶಕಿ ಅಪೂರ್ವ, ಪ್ರಸ್ತುತ ಘಟನೆಗಳನ್ನಿಟ್ಟುಕೊಂಡು ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನೂ ಹೇಳಲು ಪ್ರಯತ್ನಿಸಿದ್ದಾರೆ, ಸೂಕ್ಷ್ಮ ಕಥೆಯ ಜೊತೆ ವಾಸ್ತವಕ್ಕೆ ತೀರ ಹತ್ತಿರವಿರೋ ವಿಷಯವೇ ಈ ಚಿತ್ರದ ಜೀವಾಳ. ಈ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದಿದೆ.
ತೈಲೂರು ಗ್ರಾಮದಲ್ಲಿ ಕೂಲಿ ಮಾಡಿಕೊಂಡಿದ್ದ ಸೀನಣ್ಣ ದಂಪತಿಯ ಒಬ್ಬನೇ ಮಗ ಚೇತನ ಈ ಚಿತ್ರದ ಹೀರೋ, ಆ ಊರಿಗೆ ಹೊಸದಾಗಿ ಮೊಬೈಲ್ ಟವರ್ ಹಾಕಿದಾಗ ಅಲ್ಲಿಗೆ ಮೊಬೈಲ್ ನೆಟ್ವರ್ಕ್ ಬರುತ್ತದೆ, ಆತ ಶಾಲೆಯಲ್ಲಿ ಸಖತ್ ಚೂಟಿ, ಸ್ನೇಹಿತರ ಗುಂಪಿನಲ್ಲೆಲ್ಲ ಆತನೇ ಫಾಸ್ಟ್. ಶಾಲೆಯ ಹಳೆಯ ವಿದ್ಯಾರ್ಥಿನಿಯೊಬ್ಬರು ಗುರುಗಳಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದಾಗ ತಾನೊಂದು ಯೂಟ್ಯೂಬ್ ಚಾನೆಲ್ ಮಾಡಿಕೊಂಡಿರುವುದಾಗಿಯೂ, ಅದರಿಂದ ದುಡ್ಡ ಬರುತ್ತಿರುವುದಾಗಿಯ ಹೇಳುತ್ತಾಳೆ. ಇದನ್ನು ಕೇಳಿದ ಚೇತು ತಾನೂ ಒಂದಷ್ಟು ವೀಡಿಯೋಗಳನ್ನು ಫೇಸ್ಬುಕ್ನಲ್ಲಿ ಹಾಕಿದರೆ ದುಡ್ಡು ಬರುತ್ತೆ ಎಂಬ ಕಲ್ಪನೆಯಿಂದ ಮೊಬೈಲ್ ಕೊಡಿಸುವವರೆಗೆ ತಾನು ಊಟ ಮಾಡಲ್ಲ ಎಂದು ಮನೆಯಲ್ಲಿ ಹಠ ಮಾಡುತ್ತಾನೆ. ಈತನ ಹಟಕ್ಕೆ ಸೋತ ಸೀನಣ್ಣ ಹಸು ಕೊಳ್ಳಲು ಕೂಡಿಟ್ಟಿದ್ದ ಹಣದಿಂದ ಮಗನಿಗೆ ಹೊಸ ಮೊಬೈಲ್ ಕೊಡಿಸುತ್ತಾನೆ. ನಂತರ ಚೇತು ಓದುವುದನ್ನೇ ಬಿಟ್ಟು ವಿಡಿಯೋ ಮಾಡಿ ಫೇಸ್ ಬುಕ್ನಲ್ಲಿ ಹಾಕಿ ಸಿರಿವಂತನಾಗುವ ಕನಸು ಕಾಣುತ್ತಾನೆ, ಅದೇ ಸಮಯಕ್ಕೆ ಆ ಊರಿಗೆ ಕಳ್ಳಬಟ್ಟಿ ಮಾಡುವ ಗುಂಪೊಂದು ಬಂದು ಕಮ್ಮಿ ಬೆಲೆಗೆ ಜನರಿಗೆಲ್ಲ ಕಳ್ಳಬಟ್ಟಿ ಕೊಟ್ಟು ಕುಡಿತದ ದಾಸರನ್ನಾಗಿ ಮಾಡುತ್ತದೆ, ಇವರಿಗೆ ಸ್ಥಳೀಯ ಪೊಲೀಸರೂ ಶಾಮೀಲಾಗಿರುತ್ತಾರೆ, ಇದನ್ನು ಕಂಡ ಆ ಮಕ್ಕಳು ಇವರು ಮಾಡುತ್ತಿರುವ ಕಳ್ಳಬಟ್ಟಿ ದಂದೆಯನ್ನು ವೀಡಿಯೋ ಮಾಡಿ ಅದು ಮೇಲಕಾರಿಗಳಿಗೆ ಗೊತ್ತಾಗುವಂತೆ ಮಾಡುತ್ತಾರೆ. ಮುಂದೆ ಏನಾಗುತ್ತದೆ, ಚೇತನನ ಹಣ ಮಾಡುವ ಆಸೆ ಈಡೇರಿತೇ ಇದಕ್ಕೆಲ್ಲ ಉತ್ತರ ಬೇಕೆಂದರೆ ನೀವು ಮುಖ್ಯವಾಗಿ ನಿಮ್ಮ ಮಕ್ಕಳನ್ನು ಜೊತೆ ಕರೆದುಕೊಂಡು ಹೋಗಿ ಚಿತ್ರವನ್ನು ವೀಕ್ಷಿಸಿ. ಚಿತ್ರದ ಅಂಜು ಹಾಡು ಸದಾ ನೆನಪಲ್ಲುಳಿಯುತ್ತದೆ, ಅಪ್ಪಟ ಹಳ್ಳಿಸೊಗಡಿನ ಹಿನ್ನೆಲೆಯಲ್ಲಿ ಮೂಡಿಬಂದಿರೋ ಓನನ್ನ ಚೇತನ ನಾಲ್ಕಾರು ಆಯಾಮಗಳಲ್ಲಿ ಗಮನ ಸೆಳೆಯುತ್ತದೆ. ತೈಲೂರು ಗ್ರಾಮದಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿರುವುದು ವಿಶೇಷ. ಪ್ರದೀಪ್ ವರ್ಮಾ ಅವರ ಸಂಗೀತ ಸಂಯೋಜನೆ, ಗುರುಪ್ರಶಾಂತ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್ , ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ಇವರೆಲ್ಲ ಚೆನ್ನಾಗಿ ನಟಿಸಿದ್ದಾರೆ. ಮಕ್ಕಳು ಓದೋ ಸಮಯದಲ್ಲಿ ಓದಬೇಕು, ಮೊಬೈಲ್ ಹುಚ್ಚು ಬೇಡ ಎಂಬುದನ್ನು ಈಗಿನ ಎಲ್ಲ ವರ್ಗದ ಮಕ್ಕಳಿಗೆ ಅನ್ವಯವಾಗವಂತೆ ನಿರ್ದೇಶಕಿ ಹೇಳಿದ್ದಾರೆ,